ದೋಹಾ : ಕತಾರ್ ನಲ್ಲಿ ಕನ್ನಡಿಗ ಅನಿವಾಸಿಗಳ ಪಾಲಿನ ಆಶಾಕಿರಣವೆಂದೇ ಹೇಳಲಾಗುತ್ತಿದ್ದ ಅಪ್ರತಿಮ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಲತೀಫ್ ಮಡಿಕೇರಿ ಇಂದು ಬೆಳಗ್ಗೆ ಕತಾರ್ ಆಸ್ಪತ್ರೆಯಲ್ಲಿ ವಿಧಿ ವಶರಾಗಿದ್ದಾರೆ.
ಮಾರ್ಚ್ 18 ರಂದು ತಾಯ್ನಾಡಿಗೆ ಮರಳಲು ಟಿಕೆಟ್ ಕಾಯ್ದಿರಿಸಿದ್ದ ಲತೀಫ್ ಅವರು ಕೋವಿಡ್ ಕಾರಣ ಮಾರ್ಚ್ 8 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಕತಾರ್ ಪೊಲೀಸ್ ಇಲಾಖೆಯಲ್ಲಿ ಕಳೆದ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು.
ಅನಿವಾಸಿ ಭಾರತೀಯರ ವೇದಿಕೆಯಾದ ಕತಾರ್ ಇಂಡಿಯನ್ ಸೋಷಿಯಲ್ ಫೋರಂ (QISF) ನ ಕಾರ್ಯದರ್ಶಿಯಾಗಿದ್ದ ಲತೀಫ್ ಅವರು ಅನಿವಾಸಿ ಭಾರತೀಯರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನೆರವಾಗುತ್ತಿದ್ದರು. ಸಮಾಜ ಸೇವೆ ಮತ್ತು ಮಾನವೀಯ ಕಾರ್ಯಗಳಲ್ಲಿ ಯಾವಾಗಲೂ ಮುಂಚೂಣಿಯಲ್ಲಿದ್ದುಕೊಂಡು ಕಾರ್ಯನಿರ್ವಹಿಸುತ್ತಿದ್ದ ಅವರು ಕತಾರಿನಲ್ಲಿ ಎಲ್ಲಾ ಅನಿವಾಸಿಗಳಿಗೆ ಚಿರಪರಿಚಿತರಾಗಿದ್ದರು. ಲತೀಫ್ ಅವರು ಪತ್ನಿ, ಮೂರು ಪುತ್ರರು, ಓರ್ವ ಪುತ್ರಿ ಮತ್ತು ಅಪಾರ ಬಂಧು ಬಳಗ – ಮಿತ್ರರನ್ನು ಅಗಲಿದ್ದಾರೆ.